*ಪಾಲಕರಿಗೆ ಒಂದಿಷ್ಟು ಕಿವಿಮಾತು*
ಪ್ರತಿಯೊಬ್ಬ ತಂದೆ ತಾಯಿಗೂ ಮಕ್ಕಳೇ ಆಸ್ತಿ. ಅವರನ್ನು ಓದಿಸಬೇಕು, ಉನ್ನತ ಹುದ್ದೆಗೆ ಕಳುಹಿಸಬೇಕು, ಹೀಗೆ ಹತ್ತಾರು ಕನಸುಗಳನ್ನು ಮಕ್ಕಳಲ್ಲಿ ಕಾಣುತ್ತಿರುತ್ತಾರೆ. ಅಷ್ಟೇ ಅಲ್ಲದೆ, ತಾವೇನು ಮಾಡಲಾಗಲಿಲ್ಲವೋ ಅವುಗಳೆಲ್ಲವನ್ನು ಮಕ್ಕಳಲ್ಲಿ ಮಾಡಿಸುವತ್ತ ಒತ್ತು ನೀಡುತ್ತಾರೆ. ಇದು ಕೆಲವೊಮ್ಮೆ ಮಕ್ಕಳಿಗೆ ಮಾನಸಿಕ ಹಿಂಸೆಯಾಗಿ ಕಾಡಿದರೂ ಅಚ್ಚರಿಪಡಬೇಕಾಗಿಲ್ಲ.
ಇನ್ನು ನಮ್ಮ ಮಕ್ಕಳು ಬೇರೆಯವರಿಗಿಂತ ಯಾವುದರಲ್ಲೂ ಕಡಿಮೆಯಾಗಬಾರದೆಂಬ ಉದ್ದೇಶದಿಂದಲೇ ತಮ್ಮ ಅತೃಪ್ತ ಆಸೆ ಆಕಾಂಕ್ಷೆಗಳನ್ನೆಲ್ಲ ಮಕ್ಕಳ ಮೇಲೆ ಹೇರಿ ಅವರ ಮೂಲಕ ತಾವು ಮಾಡಲಾಗದನ್ನು ಈಡೇರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಕೆಲವೊಮ್ಮೆ ಪೋಷಕರು ಇಷ್ಟಪಡುವ ವಿಚಾರ ಮಕ್ಕಳಿಗೆ ಇಷ್ಟವಾಗದೆ ಹೋಗ ಬಹುದು ಇಂತಹ ಸಂದರ್ಭದಲ್ಲಿ ಫೋಷಕರ ಒತ್ತಡಕ್ಕೆ ಕಟ್ಟು ಬಿದ್ದು ಮಕ್ಕಳು ಅನಿವಾರ್ಯವಾಗಿ ಅದನ್ನು ಒಪ್ಪಿಕೊಂಡರೂ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.
ಮಕ್ಕಳು ತಪ್ಪು ಮಾಡಿದಾಗ ತಿಳಿ ಹೇಳಿ ಅವರನ್ನು ತಿದ್ದಬೇಕು. ಆದರೆ ಅವರಿಗೆ ಹೊಡೆಯುವ ಮುನ್ನ ಸ್ವಲ್ಪ ಯೋಚಿಸಿ ಯಾವತ್ತೂ ತಲೆಗೆ ಹೊಡೆಯಲೇ ಬೇಡಿ. ಅಷ್ಟೇ ಅಲ್ಲದೆ ಯಾರದ್ದೋ ಮಕ್ಕಳಿಗೆ ಹೋಲಿಸಿ ನಿಮ್ಮ ಮಕ್ಕಳಿಗೆ ಬಯ್ಯುವುದನ್ನು ನಿಲ್ಲಿಸಿ. ಮಕ್ಕಳಲ್ಲಿ ಏನು ಆಸಕ್ತಿ ಇದೆಯೋ ಅದರತ್ತ ಗಮನಹರಿಸಿ. ಅದನ್ನು ಹೊರತುಪಡಿಸಿ ನಾವೇನು ಆಗಲಿಲ್ಲವೋ ಅದೇ ಆಗಬೇಕೆಂದು ಮಕ್ಕಳ ಮೇಲೆ ಒತ್ತಡ ತರಬೇಡಿ. ಬಾಲ್ಯದಲ್ಲಿ ಮೊದಲಿಗೆ ಅವರು ಮನೆಗೆ ಒಳ್ಳೆಯ ಮಕ್ಕಳಾಗಲಿ ಆ ನಂತರ ಶಾಲೆಯಲ್ಲಿ ಒಳ್ಳೆಯ ವಿದ್ಯಾರ್ಥಿಯಾಗಲಿ... ಮುಂದೆ ಬೆಳೆಯುತ್ತಾ ಅವರಿಗೆ ಏನು ಆಸಕ್ತಿ ಇದೆಯೋ ಅದನ್ನು ಅರಿತು ಅತ್ತ ಗಮನಹರಿಸಿ.